ನಾನು ನನ್ನ ಜೀವನದಲ್ಲಿ ಯಾವುದೇ ಆಕ್ರಮಗಳನ್ನು ಎಸಗಿಲ್ಲ. ನಲವತ್ತು ವರ್ಷಗಳ ಹಿಂದೆ ಖರೀದಿ ಮಾಡಿರುವ ಭೂಮಿ ಅದಾಗಿದ್ದು, ಈ ಸರ್ಕಾರದ ಷಡ್ಯಂತ್ರ್ಯದ ವಿರುದ್ಧ ಕಾನೂನು ವ್ಯಾಪ್ತಿಯಲ್ಲಿಯೇ ಹೋರಾಟ ನಡೆಸುತ್ತೇನೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು.
ನವದೆಹಲಿಗೆ ತೆರಳುವ ಮುನ್ನ ತಮ್ಮ ನಿವಾಸದ ಬಳಿ ಅವರು ಮಾಧ್ಯಮಗಳ ಜತೆ ಮಾತನಾಡಿದರು.ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದೇನೆ. ಭೂಮಿ ಒತ್ತುವರಿ ಸೇರಿದಂತೆ ನಾನು ಯಾವ ಅಕ್ರಮವನ್ನೂ ಮಾಡಿಲ್ಲ, ಮಾಡುವುದೂ ಇಲ್ಲ. ನಾನು ಒಬ್ಬ ರೈತನಾಗಿ ಬದುಕಲು 40 ವರ್ಷಗಳ ಹಿಂದೆ ಖರೀದಿಸಿರುವ ಜಮೀನು ಅದು. ಒಬ್ಬ ಸಾಮಾನ್ಯ ಪ್ರಜೆಗೆ ಯಾವುದೇ ತೆರವು ಮಾಡಬೇಕು ಎಂದರೂ ಕಾನೂನು ಪ್ರಕಾರ ಹದಿನೈದು ದಿನಗಳ ಮೊದಲೇ ನೋಟಿಸ್ ನೀಡಬೇಕು. ಅದರೆ ನನಗೆ ಈವರೆಗೆ ಯಾವುದೇ ಮಾಹಿತಿ ಅಥವಾ ನೋಟಿಸ್ ನೀಡಿಲ್ಲ ಎಂದು ಅವರು ದೂರಿದರು.
ಈ ಸರ್ಕಾರ ನಡೆಸುತ್ತಿರುವ ದಬ್ಬಾಳಿಕೆ ಏನು ಎಂದು ಎಲ್ಲರಿಗೂ ಗೊತ್ತಿದೆ. ಈ ಸರ್ಕಾರ ಬೆಂಗಳೂರು ನಗರವನ್ನು ಲೂಟಿ ಮಾಡುತ್ತಿದೆ. ದೇಶದ ಇತಿಹಾಸದಲ್ಲೇ ಇದೆ ಮೊದಲ ಬಾರಿಗೆ ಈ ರೀತಿ ಪ್ರಕರಣಕ್ಕೆ ಎಸ್ ಐಟಿ ರಚನೆ ಮಾಡಿದ್ದಾರೆ. ಇಂತಹ ನಡವಳಿಕೆಗಳಿಗೆ ಒಂದಲ್ಲ ಒಂದು ದಿನ ಬೇರೆ ರೀತಿಯ ಉತ್ತರ ಬರುತ್ತಿದೆ ಎಂದು ಅವರು ಕಿಡಿಕಾರಿದರು.
ಕಾಂಗ್ರೆಸ್ ಸರ್ಕಾರಕ್ಕೆ ನಾನೇ ಟಾರ್ಗೆಟ್ ಅಗಿದ್ದೇನೆ. ನನ್ನ ಬಿಟ್ಟರೆ ಯಾರು ಇಲ್ಲ ಈ ಸರ್ಕಾರಕ್ಕೆ. ಸದ್ಯ ನಡೆಯುತ್ತಿರುವ ಎಲ್ಲಾ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತಿದ್ದೆನೆ. 40 ವರ್ಷದ ಹಿಂದೆ ಖರೀದಿ ಮಾಡಿದ ಈ ಭೂಮಿಗೆ ನೂರು ಬಾರಿ ತನಿಖೆಯಾಗಿದೆ. 40 ವರ್ಷದಿಂದಲೂ ತನಿಖೆ ನಡೆಯುತ್ತಲೆ ಇದೆ. ನನ್ನ ಪರಿಸ್ಥಿತಿಯೇ ಹೀಗಾದರೆ ಜನ ಸಾಮಾನ್ಯರ ಪರಿಸ್ಥಿತಿ ಹೇಗಿರಬಹುದು? ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಕಾನೂನು ಬದ್ದವಾಗಿ ನಾನು 40 ವರ್ಷಗಳ ಹಿಂದೆ ತೆಗೆದುಕೊಂಡಿರುವ ಜಮೀನು ಅದಾಗಿದೆ.ಇವತ್ತು ನಡೆಯುತ್ತಿರುವ ಸರ್ಕಾರದ ನಡವಳಿಕೆ ವಿರುದ್ಧ ಕಾನೂನು ವ್ಯಾಪ್ತಿಯಲ್ಲಿ ಹೋರಾಟ ಮಾಡುತ್ತನೆ. ಯಾರೂ ಗಾಬರಿಯಾಗಬೇಕಿಲ್ಲ. ಅದರೆ, ಮಾಧ್ಯಮಗಳು ಸತ್ಯಾಂಶಗಳನ್ನು ತಿಳಿದು ವರದಿ ಮಾಡಬೇಕು ಎಂದು ಅವರು ಮಾಧ್ಯಮಗಳಲ್ಲಿ ಮನವಿ ಮಾಡಿದರು.
ಜೆಸಿಬಿ ಎಂಟ್ರಿ ಮತ್ತು ಕಾರ್ಯಾಚರಣೆ
ಇಂದು ಬೆಳಗ್ಗೆಯಿಂದಲೇ ಕೇತಗಾನಹಳ್ಳಿ ತೋಟದ ಮನೆಗೆ 4 ಜೆಸಿಬಿಗಳು ಪ್ರವೇಶಿಸಿ, ಭೂಮಿ ಸಮತಟ್ಟು ಮಾಡುತ್ತಿರುವ ದೃಶ್ಯ ಕಂಡುಬಂದಿದೆ. ಕಂದಾಯ ಇಲಾಖೆ ಅಧಿಕಾರಿಗಳು, ಸರ್ವೇ ಅಧಿಕಾರಿಗಳು, ತಹಶೀಲ್ದಾರ್ ಹಾಗೂ ಪೊಲೀಸ್ ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ. ಒತ್ತುವರಿ ಜಾಗದ ಮೌಲ್ಯವನ್ನು ನಿರ್ಧರಿಸಿ, ಸರಕಾರದ ಹೆಸರಿನಲ್ಲಿ ಕಲ್ಲಿನ ಕಂಬಗಳನ್ನು ನೆಟ್ಟು, ಸರಕಾರಿ ಬೋರ್ಡ್ ಅಳವಡಿಸಲು ತೀರ್ಮಾನಿಸಲಾಗಿದೆ.
ಒತ್ತುವರಿ ತೆರವು ಪ್ರಕ್ರಿಯೆ
ಒತ್ತುವರಿ ಜಾಗದಲ್ಲಿ ಕುಮಾರಸ್ವಾಮಿ ಅವರು ತೆಂಗು, ಅಡಿಕೆ ಮತ್ತು ಇತರ ಬೆಳೆಗಳನ್ನು ಬೆಳೆಸಿದ್ದರು. ಇದೀಗ ಈ ಪ್ರದೇಶವನ್ನು ತೆರವುಗೊಳಿಸಲು ಸರಕಾರ ನಿರ್ಧಾರ ಮಾಡಿದೆ. ಅಕ್ರಮ ಭೂ ಒತ್ತುವರಿ ತೆರವುಗೊಳಿಸಿದ ಬಳಿಕ ಈ ಜಾಗಕ್ಕೆ ಸರಕಾರಿ ಜಮೀನು ಎಂದು ಘೋಷಿಸಲಾಗುವುದು.
ಪೊಲೀಸ್ ಭದ್ರತೆ ಮತ್ತು ಮುಂದಿನ ಕ್ರಮ
ಈ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರ ಭದ್ರತೆ ಒದಗಿಸಲಾಗಿದೆ. ಅಧಿಕಾರಿಗಳು ಈ ಪ್ರಕರಣವನ್ನು ನೇರವಾಗಿ ಹೈಕೋರ್ಟ್ ಗಮನಕ್ಕೆ ತಂದು, ಮುಂದಿನ ಕಾರ್ಯಾಚರಣೆಗೆ ಸಜ್ಜಾಗಿದ್ದಾರೆ.