ಬೆಂಗಳೂರು: ಕರ್ನಾಟಕ ಉಚ್ಚ ನ್ಯಾಯಾಲಯದ ಆದೇಶದಂತೆ, ರಾಜ್ಯಾದ್ಯಂತ ಉಬರ್ ಮತ್ತು ರ್ಯಾಪಿಡೋ ಬೈಕ್ ಟ್ಯಾಕ್ಸಿ ಸೇವೆಗಳನ್ನು ಸ್ಥಗಿತಗೊಳಿಸಲು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸೂಚನೆ ನೀಡಿದ್ದಾರೆ.
ಕರ್ನಾಟಕ ಉಚ್ಚ ನ್ಯಾಯಾಲಯವು ಉಬರ್, ರ್ಯಾಪಿಡೋ ಸೇರಿದಂತೆ ಬೈಕ್ ಟ್ಯಾಕ್ಸಿ ಸೇವೆಗಳನ್ನು ಸ್ಥಗಿತಗೊಳಿಸುವಂತೆ ಆದೇಶಿಸಿತ್ತು. ಈ ಆದೇಶವನ್ನು ಕಾರ್ಯಗತಗೊಳಿಸಲು ಸಾರಿಗೆ ಸಚಿವರು ಸಾರಿಗೆ ಇಲಾಖೆಯ ಕಾರ್ಯದರ್ಶಿ, ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರಿಗೆ ಪತ್ರ ಬರೆದು ಸೂಚನೆ ನೀಡಿದ್ದಾರೆ.
ನ್ಯಾಯಾಲಯದ ಆದೇಶವು WP No.6421/2022 (MV) c/w WP No.14627/2021 (MV), WP No.19869/2021 (MV), WP No.24569/2023 (MV) (Uber India Systems Pvt. Ltd., ಮುಂಬೈ, ಗುರಗಾಂವ್ ಮತ್ತು ಬೆಂಗಳೂರು ಮತ್ತು ಇತರರು V/S ಕರ್ನಾಟಕ ಸರ್ಕಾರ, ಸಾರಿಗೆ ಇಲಾಖೆ ಕಾರ್ಯದರ್ಶಿ, ಬೆಂಗಳೂರು ಮತ್ತು ಇತರರು) ಸಂಬಂಧಿಸಿದ್ದಾಗಿದೆ. ದಿನಾಂಕ 02-04-2025ರಂದು ನೀಡಲಾದ ಆದೇಶದ ಪುಟ ಸಂಖ್ಯೆ 70, ಕಂಡಿಕೆ (ಬಿ)ಯಲ್ಲಿ ಈ ಕೆಳಗಿನಂತೆ ಆದೇಶಿಸಲಾಗಿದೆ.
“ರಿಟ್ ಅರ್ಜಿದಾರರಾದ (M/s Uber India Systems Pvt. Ltd., M/s Roppen Transportation Services Pvt. Ltd., ಮತ್ತು M/s ANI Technologies Pvt. Ltd.) ಸಂಸ್ಥೆಗಳಿಗೆ ತಮ್ಮ ಬೈಕ್ ಟ್ಯಾಕ್ಸಿ ಸೇವೆಗಳನ್ನು ಸ್ಥಗಿತಗೊಳಿಸಲು ಇಂದಿನಿಂದ ಆರು [6] ವಾರಗಳ ಕಾಲಾವಕಾಶ ನೀಡಲಾಗಿದೆ. ಈ ಆರು ವಾರಗಳ ನಂತರ ಎಲ್ಲ ಬೈಕ್ ಟ್ಯಾಕ್ಸಿ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸುವಂತೆ ರಾಜ್ಯ ಸರ್ಕಾರವು ಖಾತರಿಪಡಿಸಬೇಕು.”
ಮೇಲ್ಕಂಡ ಆದೇಶದಂತೆ, M/s Uber India Systems Pvt. Ltd., M/s Roppen Transportation Services Pvt. Ltd. ಮತ್ತು M/s ANI Technologies Pvt. Ltd. ಸಂಸ್ಥೆಗಳು ತಮ್ಮ ಬೈಕ್ ಟ್ಯಾಕ್ಸಿ ಸೇವೆಗಳನ್ನು ಸ್ಥಗಿತಗೊಳಿಸಲು ಆರು ವಾರಗಳ ಕಾಲಾವಕಾಶ ಪಡೆದಿವೆ. ಈ ಆದೇಶವನ್ನು ಕಾರ್ಯಗತಗೊಳಿಸಲು ಸಾರಿಗೆ ಇಲಾಖೆಗೆ ಸೂಚನೆ ನೀಡಲಾಗಿದೆ.