ಬೆಂಗಳೂರು: ರಾಜ್ಯದಲ್ಲಿ ಬಸ್ ದರ ಏರಿಕೆಯಿಂದಾಗಿ ಸಾರ್ವಜನಿಕರು ಈಗಾಗಲೇ ಆರ್ಥಿಕ ಸಂಕಷ್ಟ ಅನುಭವಿಸುತ್ತಿದ್ದಾರೆ. ಇದರ ಮಧ್ಯೆಯೇ ಮೆಟ್ರೋ ದರ ಏರಿಕೆಯಾಗಿರುವುದು ಪ್ರಯಾಣಿಕರಿಗೆ ಮತ್ತೊಂದು ಆಘಾತವಾಗಿದೆ. ಈ ಏರಿಕೆಗೆ ಪ್ರತಿಭಟನೆಯ ಘೋಷಣೆ ಕೇಳಿಬರುತ್ತಿದ್ದು, ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೆಟ್ರೋ ಪ್ರಯಾಣಿಕರ ಸಂಘಟನೆ ಕೂಡಾ ದರ ಇಳಿಕೆಗಾಗಿ ಹೋರಾಟ ನಡೆಸಲು ಮುಂದಾಗಿದೆ.
ಮೆಟ್ರೋ ಪ್ರಯಾಣಿಕರ ಸಂಘಟನೆ ಸಕ್ರಿಯ
ಮೆಟ್ರೋ ಪ್ರಯಾಣಿಕರ ಸಂಘಟನೆ ಈ ದರ ಏರಿಕೆಯನ್ನು ಖಂಡಿಸಿ ಒಂದು ದಿನ ಅಥವಾ ಒಂದು ವಾರ ಮೆಟ್ರೋ ಸೇವೆ ಬಳಸದಂತೆ ಕರೆ ನೀಡಲು ಯೋಜನೆ ಹಾಕಿಕೊಂಡಿದೆ. ಭಾನುವಾರದೊಳಗೆ ಮೆಟ್ರೋ ಟಿಕೆಟ್ ದರವನ್ನು ಕಡಿಮೆ ಮಾಡದಿದ್ದರೆ, ಬೃಹತ್ ಮಟ್ಟದಲ್ಲಿ ಮೆಟ್ರೋ ಬಾಯ್ಕಾಟ್ ನಡೆಸುವುದಾಗಿ ಸಂಘಟನೆ ಎಚ್ಚರಿಸಿದೆ.
ಮೆಟ್ರೋ ಬಾಯ್ಕಾಟ್ ಯಾವಾಗ?
ಮೆಟ್ರೋ ದರ ಏರಿಕೆಗೆ ವಿರೋಧ ವ್ಯಕ್ತಪಡಿಸುವುದಾಗಿ ಮೆಟ್ರೋ ಪ್ರಯಾಣಿಕರ ವೇದಿಕೆ ಬೃಹತ್ ಸಮಾವೇಶ ನಡೆಸಲು ತಯಾರಿ ನಡೆಸಿದೆ. ಬುಧವಾರ ಸುದ್ದಿಗೋಷ್ಟಿ ನಡೆಸಲಿದ್ದು, ಭಾನುವಾರದಂದು (ಫೆ. 23) ಮೆಟ್ರೋ ಪ್ರಯಾಣಿಕರ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಈ ಸಮಾವೇಶದಲ್ಲಿ ಬಾಯ್ಕಾಟ್ ದಿನಾಂಕವನ್ನು ಅಧಿಕೃತವಾಗಿ ಘೋಷಿಸಲಾಗುವುದು.
ಸಾರ್ವಜನಿಕರ ಹಿತದೃಷ್ಟಿಯಿಂದ ಹೋರಾಟ
ಸ್ಕೌಟ್ಸ್ ಅಂಡ್ ಗೈಡ್ಸ್ ಭವನದಲ್ಲಿ ನಡೆಯಲಿರುವ ಈ ಸಮಾವೇಶದಲ್ಲಿ, ಬಿಎಂಆರ್ಸಿಎಲ್ ಮೇಲಿನ ಒತ್ತಡ ಹೆಚ್ಚಿಸಲು ವಿವಿಧ ನಾಗರಿಕ ಸಂಘಟನೆಗಳು, ವಿದ್ಯಾರ್ಥಿ ಒಕ್ಕೂಟಗಳು, ಯುವಜನ ಸಂಘಟನೆಗಳು, ಹಾಗೂ ಸ್ಥಳೀಯ ನಿವಾಸಿಗಳ ಸಂಘಗಳು ಭಾಗವಹಿಸಲಿವೆ. ಬಿಎಂಆರ್ಸಿಎಲ್ ತನ್ನ ಸಾಲದ ಭಾರವನ್ನು ಪ್ರಯಾಣಿಕರ ಮೇಲೆ ಹಾಕುತ್ತಿರುವುದು ನ್ಯಾಯೋಚಿತವಲ್ಲ ಎಂದು ಸಂಘಟನೆ ವಾಗ್ದಾಳಿ ನಡೆಸಿದೆ.
ಮನವಿ ಸ್ವೀಕರಿಸದಿದ್ದರೆ ಮುಂದಿನ ಹಂತ
ಈಗಾಗಲೇ ಸಾವಿರಾರು ಸಹಿಗಳನ್ನು ಸಂಗ್ರಹಿಸಲಾಗಿದ್ದು, ಬಿಎಂಆರ್ಸಿಎಲ್ ಎಂಡಿ ಅವರನ್ನು ಭೇಟಿ ಮಾಡಿ ದರ ಕಡಿತಗೊಳಿಸುವಂತೆ ಮನವಿ ಸಲ್ಲಿಸಲಾಗಿದೆ. ಆದರೆ, ಈ ಮನವಿಯನ್ನು ಪರಿಗಣಿಸದಿದ್ದರೆ, ಬೃಹತ್ ಹೋರಾಟ ನಡೆಸಬೇಕಾಗುತ್ತದೆ ಎಂದು ಸಂಘಟನೆ ಎಚ್ಚರಿಸಿದೆ.
“ಸಾರ್ವಜನಿಕ ಸಾರಿಗೆ ಸೇವೆಗಳು ಲಾಭದ ಆಸೆಯಿಂದ ಅಲ್ಲ, ಜನಸಾಮಾನ್ಯರ ಅನುಕೂಲಕ್ಕಾಗಿ ಇರಬೇಕು. ನಮ್ಮ ಹೋರಾಟ ಮುಂದುವರಿಯುತ್ತದೆ!” ಎಂದು ಸಂಘಟನೆಯ ಪ್ರತಿನಿಧಿಗಳು ಅಭಿಪ್ರಾಯಪಟ್ಟಿದ್ದಾರೆ.
ಸಾರ್ವಜನಿಕರ ಬೆಂಬಲ ಹೀಗಿದೆ
ಬೆಂಗಳೂರಿನಲ್ಲಿ ಪ್ರತಿದಿನ ಮೆಟ್ರೋ ಬಳಸುವ ಸಾವಿರಾರು ಜನರು, ದರ ಏರಿಕೆಯಿಂದ ತೀವ್ರ ಕಷ್ಟ ಅನುಭವಿಸುತ್ತಿದ್ದಾರೆ. ಇದು ಸಾಮಾನ್ಯ ಜನರ ಜೀವನಕ್ಕೆ ಹೆಚ್ಚುವರಿ ಆರ್ಥಿಕ ಭಾರವಾಗಿದ್ದು, ದರ ಇಳಿಸುವಂತೆ ಒತ್ತಾಯಿಸುತ್ತಿದ್ದಾರೆ.
ಈ ಹೋರಾಟದಲ್ಲಿ ನೀವೂ ಭಾಗಿಯಾಗಲು, ಬಾಯ್ಕಾಟ್ ದಿನಾಂಕ ನಿಗದಿಯಾದ ಬಳಿಕ ಮೆಟ್ರೋ ಪ್ರಯಾಣದಿಂದ ದೂರವಿರಿ ಎಂದು ಸಂಘಟನೆ ನಾಗರಿಕರಿಗೆ ಮನವಿ ಮಾಡಿದೆ.