ಬಿಜೆಪಿಯವರು ಹನಿಟ್ರ್ಯಾಪ್ ವಿಚಾರವಾಗಿ ಸದನದಲ್ಲಿ ಚರ್ಚೆ ಮಾಡಬೇಕು ಅನ್ನೊ ಕಾರಣಕ್ಕೆ ಹದಿನೆಂಟು ಶಾಸಕರು ಆರು ತಿಂಗಳು ಅಮಾನತು ಆಗಿದ್ದಾರೆ ಎಂದು ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಅವರು ಹೇಳಿದರು.
ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹನಿಟ್ರ್ಯಾಪ್ ವಿಷಯವನ್ನು ಸದನದಲ್ಲಿ ಮುಖ್ಯವಾಗಿ ತೆಗೆದುಕೊಳ್ಳಿ ಎಂದು ಬಿಜೆಪಿಯವರು ಕಲಾಪದಲ್ಲಿ ಗದ್ದಲ ಮಾಡಿದ್ದರು. ಆದರೆ ನಮ್ಮ ಸರ್ಕಾರ ಹನಿಟ್ರ್ಯಾಪ್ ಬಗ್ಗೆ ಸ್ಪಷ್ಟನೆ ನೀಡಿತ್ತು. ಉನ್ನತ ಮಟ್ಟದ ತನಿಖೆ ಮಾಡಲಾಗುವುದು ಎಂದು ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರು ಹೇಳಿದ್ದರು. ಆದರೂ ಗಲಾಟೆ ಮಾಡಿದರು. ಇದು ಎಷ್ಟು ಸರಿ ನೀವೆ ಹೇಳಿ, ಸ್ಪೀಕರ್ ಹತ್ತಿರ ಗಲಾಟೆ ಮಾಡಿ ಕಾಗದ ಪತ್ರವನ್ನು ಅವರ ಮೇಲೆ ಎಸೆಯುವ ಅವಶ್ಯಕತೆ ಏನಿತ್ತು. ಹನಿಟ್ರ್ಯಾಪ್ ಬಗ್ಗೆ ಅವಸರ ಏನಿದೆ, ಈ ನಾಟಕ ಏನು? ಎಂದು ಕಿಡಿ ಕಾರಿದರು.
ಹನಿಟ್ರ್ಯಾಪ್ ಗಿಂತ ಚರ್ಚೆ ಮಾಡುವ ಹಲವು ವಿಷಯಗಳಿದ್ದವು. ರೈತರ ಸಮಸ್ಯೆ ಇದ್ದವು. ಕುಡಿಯುವ ನೀರಿನ ವಿಷಯದ ಬಗ್ಗೆ ಮಾತನಾಡಬೇಕಿತ್ತು. ಮುಖ್ಯಮಂತ್ರಿಗಳು ಉತ್ತರ ನೀಡಿದ ಮೇಲೂ ಹನಿಟ್ರ್ಯಾಪ್ ವಿಷಯವನ್ನೇ ಮುಖ್ಯವಾಗಿ ತೆಗೆಯಬೇಕಾದ ತುರ್ತು ಏನಿತ್ತು ಎಂದು ಪ್ರಶ್ನಿಸಿದರು.
ಬಿಜೆಪಿಯವರಿಗೆ ಪ್ರಚಾರ ಗಿಟ್ಟಿಸಿಕೊಳ್ಳಬೇಕು, ಮಾಧ್ಯಮಗಳಲ್ಲಿ ಬರಬೇಕು ಎಂಬ ಉದ್ದೇಶವಿದೆ. ಅವರ ಸಾಧನೆ ಏನಿದೆ. ನ್ಯಾಯ ಕಲಾಪದಲ್ಲಿ ಸಿಗುತ್ತಾ. ಬಿಜೆಪಿಯವರ ಈ ವರ್ತನೆ ನಾಚಿಕೆಗೇಡು. ಇದರ ಬಗ್ಗೆ ವಿಷಾದವಿದೆ ಎಂದರು.
ಹನಿಟ್ರ್ಯಾಪ್ ಅನ್ನೇ ತೆಗೆದುಕೊಂಡು ಸಾರ್ವಜನಿಕರಿಗೆ ಏನೋ ಪ್ರಯೋಜನ ಆಗಿದೆ ಅನ್ನೋ ರೀತಿ ಬಿಜೆಪಿಯವರು ಬಿಂಬಿಸಿದರು. ಲಿಖಿತ ದೂರು ನೀಡೋದು ಬೇಡ ಸರ್ಕಾರವೆ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ಮಾಡುತ್ತೆ. ಸರ್ಕಾರ ಸದನದಲ್ಲಿ ಹೇಳಿದ ಮೇಲೆ ಮುಗಿಯಿತು. ಸ್ವತಃ ಸಿಎಂ ಅವರೇ ತನಿಖೆ ನಡೆಸುತ್ತೇವೆ ಅಂತ ಹೇಳಿದ್ದಾರೆ. ಇದನ್ನೇ ಪ್ರಚಾರಕ್ಕಾಗಿ, ಟಿವಿಯಲ್ಲಿ ತೋರಿಸುವ ಬದಲು ಸಾರ್ವಜನಿಕರಿಗೆ ಉಪಯೋಗವಾಗುವ ವಿಷಯ ತೋರಿಸಿ ಎಂದರು.
ಇದು ನಮ್ಮ ಸಮಾಜ ಅವನತಿಗೆ ಹೋಗುತ್ತಿರುವ ಸೂಚನೆ. ಇಂತಹ ವ್ಯವಸ್ಥೆಯಲ್ಲಿ ನಾವು ಇದ್ದೇವೆ. ಬೇರೆ ದೇಶಗಳಲ್ಲಿ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡುತ್ತೆವೆ. ಆದರೆ ನಾವು ಬರೀ ಹನಿ ಟ್ರ್ಯಾಪ್ ಬಗ್ಗೆ ಮಾತನಾಡುತ್ತೇವೆ. ಇದು ನಾಚಿಕೇಡು ಎಂದು ಬೇಸರ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರ ಯಾವ ಮಾನದಂಡಗಳನ್ನು ಪರಿಗಣಿಸಿ ಕ್ಷೇತ್ರ ಮರುಹಂಚಿಕೆ ಮಾಡುತ್ತಿದೆ ಎಂಬ ಆತಂಕ ನಮಗಿದೆ. ಪಕ್ಷಾತೀತವಾಗಿ ಎಲ್ಲರಿಗೂ ಈ ಆತಂಕ ಇದೆ. ಪ್ರತಿನಿಧಿಸುವ ಅವಕಾಶ ಕಡಿಮೆಯಾದರೆ ನಮಗೆ ತೊಂದರೆ. ಸಾರ್ವಜನಿಕ ಹಿತಾಸಕ್ತಿ ದೃಷ್ಟಿಯಿಂದ ನಾವೆಲ್ಲ ಈ ಬಗ್ಗೆ ಪ್ರಶ್ನಿಸಬೇಕು ಎಂದರು.