ಶ್ರೀನಗರ: ಜಮ್ಮು-ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯಾನಕ ಭಯೋತ್ಪಾದಕ ದಾಳಿಯಲ್ಲಿ ಇಬ್ಬರು ಕನ್ನಡಿಗರು ಸೇರಿದಂತೆ 26 ಪ್ರವಾಸಿಗರು ಪ್ರಾಣ ಕಳೆದುಕೊಂಡಿದ್ದಾರೆ. ಈ ಘಟನೆಯ ಬಳಿಕ ಜಮ್ಮು-ಕಾಶ್ಮೀರ ಪೊಲೀಸರು ದಾಳಿಯಲ್ಲಿ ಭಾಗಿಯಾದ ನಾಲ್ವರು ಭಯೋತ್ಪಾದಕರ ರೇಖಾಚಿತ್ರಗಳನ್ನು ಬಿಡುಗಡೆ ಮಾಡಿದ್ದಾರೆ.
ದಾಳಿಯ ನಂತರ, ಪೊಲೀಸರು ಈ ಭಯೋತ್ಪಾದಕರ ಬಂಧನಕ್ಕಾಗಿ ಬಹುಮಾನವನ್ನು ಘೋಷಿಸಿದ್ದಾರೆ. ಆದರೆ, ಈ ಉಗ್ರರ ಗುರುತು ಮತ್ತು ದಾಳಿಯಲ್ಲಿ ಅವರ ನಿಖರವಾದ ಪಾತ್ರವು ಇನ್ನೂ ಸ್ಪಷ್ಟವಾಗಿಲ್ಲ. ಇದೀಗ ದಾಳಿಯಲ್ಲಿ ಭಾಗಿಯಾದ ಒಬ್ಬ ಭಯೋತ್ಪಾದಕನ ಫೋಟೋ ಮೊದಲ ಬಾರಿಗೆ ಬಹಿರಂಗಗೊಂಡಿದೆ.
ಅಧಿಕಾರಿಗಳ ಪ್ರಕಾರ, ಈ ದಾಳಿಯು ಸಂಪೂರ್ಣವಾಗಿ ಯೋಜಿತವಾಗಿತ್ತು. ಪ್ರವಾಸಿಗರಿಗೆ ಈ ದಾಳಿಯ ಬಗ್ಗೆ ಯಾವುದೇ ಮುನ್ಸೂಚನೆ ಇರಲಿಲ್ಲ. ಮಂಗಳವಾರ ಮಧ್ಯಾಹ್ನ, ಬೈಸರನ್ ಕಣಿವೆಯಲ್ಲಿ ಪ್ರವಾಸಿಗರು ಪ್ರಕೃತಿಯ ಸೌಂದರ್ಯವನ್ನು ಆನಂದಿಸುತ್ತಿದ್ದ ವೇಳೆ, ಇದ್ದಕ್ಕಿದ್ದಂತೆ ಗುಂಡಿನ ಸದ್ದು ಕೇಳಿಸಿತು. ದಾಳಿಕೋರರು ಕ್ಷಣಾರ್ಧದಲ್ಲಿ ಮನಬಂದಂತೆ ಗುಂಡು ಹಾರಿಸಲು ಆರಂಭಿಸಿದರು, ಇದರಿಂದ ಪ್ರದೇಶದಲ್ಲಿ ಭೀತಿಯ ವಾತಾವರಣ ನಿರ್ಮಾಣವಾಯಿತು. ಜನರು ತಮ್ಮ ಪ್ರಾಣ ಉಳಿಸಿಕೊಳ್ಳಲು ಓಡಾಡಲು ಶುರುಮಾಡಿದರು.
ಈ ಘಟನೆಯ ಬಳಿಕ ಭದ್ರತಾ ಪಡೆಗಳು ಇಡೀ ಪಹಲ್ಗಾಮ್ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆಯನ್ನು ತೀವ್ರಗೊಳಿಸಿವೆ. ದಾಳಿಕೋರರನ್ನು ಇನ್ನೂ ಪೂರ್ಣವಾಗಿ ಗುರುತಿಸಲಾಗಿಲ್ಲ. ಆದರೆ, ದಾಳಿಯ ಹಿಂದಿನ ಉದ್ದೇಶ ಮತ್ತು ಉಗ್ರರ ಜಾಲವನ್ನು ಕಂಡುಹಿಡಿಯಲು ಗುಪ್ತಚರ ಸಂಸ್ಥೆಗಳು ಎಲ್ಲ ಕೋನಗಳಿಂದಲೂ ತನಿಖೆ ನಡೆಸುತ್ತಿವೆ.